ಪರಿಸರದ ಕಥೆ ಪೂರ್ಣಚಂದ್ರ ತೇಜಸ್ವಿಯವರ ಕೃತಿ. ‘ಪರಿಸರದ ಕತೆ’ಕೃತಿ ಕನ್ನಡದ ಅತ್ತ್ಯುತ್ತಮ ಕೃತಿಗಳಲ್ಲೊಂದು. ಕನ್ನಡ ಸಾಹಿತ್ಯದ ಯಾವುದೇ ಪ್ರಾಕಾರ ಅಥವಾ ವಿಭಜನೆಗಳಿಗಿಂತ ಭಿನ್ನವಾದ ಕೃತಿ. ಕಥೆ, ಪ್ರಬಂಧ ಇತ್ಯಾದಿ ಸ್ಪಷ್ಟ ವಿಭಜನೆಗೆ ಒಳಪಡದ ಕೃತಿ. ತೇಜಸ್ವಿಯವರು ತಮ್ಮ ಬಾಲ್ಯದಿಂದಲೂ ಮತ್ತು ಕೃಷಿ ಆರಂಭಿಸಿದ ದಿನಗಳಲ್ಲೂ, ತಮ್ಮ ಪರಿಸರದ ಬಗೆಗಿನ ಕುತೂಹಲ, ವಿಸ್ಮಯ, ಅನುಭವಗಳನ್ನು ಪುಸ್ತಕದ ಹದಿನಾಲ್ಕು ಅಧ್ಯಾಯಗಳಲ್ಲಿ ವಿವರಿಸುತ್ತಾರೆ. ಮಾರ, ಪ್ಯಾರ, ಕಿವಿ ಎಂಬ ಸಾಕು ನಾಯಿ, ಎಂಗ್ಟ, ಮಾಸ್ತಿ, ಬೈರ, ಸುಸ್ಮಿತ, ಗಾಡ್ಲಿ, ಸೀನಪ್ಪ, ಮುಂತಾದ ಪಾತ್ರಗಳು ನಮಗೂ ಆಪ್ತವಾಗುವಂತೆ ತೇಜಸ್ವಿಯವರು ವಿಶಿಷ್ಟ ಶೈಲಿಯಿಂದ ನಿರೂಪಿಸಿದ್ದಾರೆ. ‘ಪ್ರಕೃತಿಯೆಂದರೆ ನಮ್ಮ ಬದುಕಿನ ಭಾಗವಲ್ಲ, ನಾವು ಪ್ರಕೃತಿಯ ಒಂದು ಭಾಗ’ ಎಂಬ ತೇಜಸ್ವಿಯವರ ಮಾತಿಗೆ ‘ಪರಿಸರದ ಕತೆ’ ಉತ್ತಮ ಉದಾಹರಣೆ. ‘ಪುಸ್ತಕ ಪ್ರಾಕಶನ’ದ ಪ್ರಕಟಣೆಯಾದ ಈ ಪುಸ್ತಕ ಈವರೆಗೂ ಹಲವಾರು ಮುದ್ರಣಗಳನ್ನು ಕಂಡಿದೆ. ಪ್ರಥಮ ಮುದ್ರಣ 1991. ಕೃಪಾಕರ-ಸೇನಾನಿಯವರ ಸುಂದರ ಕರಿಮಂಡೆ ಅರಿಶಿನಬುರುಡೆ ( ) ಪಕ್ಷಿಯ ಛಾಯಾಚಿತ್ರ ಈ ಪುಸ್ತಕದ ಮುಖಪುಟ. ಪರಿಸರದ ಕತೆಗಳು ಎನ್ನುವ ಕಥಾ ಸಂಕಲನದಲ್ಲಿ ತೇಜಸ್ವಿಯವರ ಸುತ್ತಮುತ್ತಲಿನ ಪರಿಸರದ ಪಶು-ಪಕ್ಷಿಗಳ ಬಗ್ಗೆ ಹಾಗೂ ತಮ್ಮ ತೋಟದಲ್ಲಿ ಕೆಲಸ ಮಾಡುವ ಕೆಲಸದ ಆಳುಗಳ ವೈಶಿಷ್ಟ್ಯತೆಯನ್ನು ಇದರಲ್ಲಿ ತಿಳಿಯಬಹುದಾಗಿದೆ